ಗಂಗೆಯ ಒಡಲಲ್ಲಿ ಜವರಾಯನ ಅಟ್ಟಹಾಸ: ಮುಳುಗುತ್ತಿದ್ದವರ ರಕ್ಷಣೆಗೆ ಮುಂದಾದ ಮಹಿಳಾ ಟ್ರಾಫಿಕ್ ಕಾನ್ಸ್ಟೇಬಲ್!
ಬಿಹಾರ : ಬಿಹಾರದ ರಾಜಧಾನಿ ಪಾಟ್ನಾದ ದೀಘಾ ಘಾಟ್ನಲ್ಲಿ ಭಾನುವಾರ ಗಂಗಾ ನದಿಯಲ್ಲಿ ಸಂಭವಿಸಿದ ದುರಂತವೊಂದರಲ್ಲಿ ಇಬ್ಬರು ಯುವಕರು ಮುಳುಗಿ ಕಣ್ಮರೆಯಾಗಿದ್ದಾರೆ. ಈ ವೇಳೆ, ತನ್ನ ಜೀವದ ಹಂಗು ತೊರೆದು ನದಿಗೆ ಹಾರಿ, ಮುಳುಗುತ್ತಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ ಮಹಿಳಾ ಟ್ರಾಫಿಕ್ ಕಾನ್ಸ್ಟೇಬಲ್ ತಾರಾ ಕುಮಾರಿ ಅವರು ಅಪ್ರತಿಮ ಸಾಹಸ ಮೆರೆದಿದ್ದಾರೆ. ಹೌದು ಮಾಘಿ ಪೂರ್ಣಿಮೆಯ ಪವಿತ್ರ ಸ್ನಾನಕ್ಕೆಂದು ಗಂಗಾ ನದಿಗೆ ಭಕ್ತರ ದಂಡೇ ಹರಿದುಬಂದಿತ್ತು. ಈ ಸಂದರ್ಭದಲ್ಲಿ ಗಯಾ ಮೂಲದ 50 ವರ್ಷದ ಗಾರ್ಡ್ ಬಾಬು ಮತ್ತು 30 ವರ್ಷದ ಧನಂಜಯ್ ಕುಮಾರ್ ಎಂಬುವವರು ನದಿಯ ಆಳವಾದ ಭಾಗಕ್ಕೆ ತೆರಳಿ ನೀರಿನ ಸುಳಿಗೆ ಸಿಲುಕಿ ಮುಳುಗತೊಡಗಿದರು. ಇದನ್ನು ಗಮನಿಸಿದ ಟ್ರಾಫಿಕ್ ನಿರ್ವಹಣಾ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ತಾರಾ ಕುಮಾರಿ, ತಾನು ಸಮವಸ್ತ್ರದಲ್ಲಿದ್ದೇನೆ ಅಥವಾ ಯಾವುದೇ ಸುರಕ್ಷತಾ ಸಾಧನಗಳಿಲ್ಲ ಎಂಬುದನ್ನು ಲೆಕ್ಕಿಸದೆ, ತಕ್ಷಣವೇ ನದಿಗೆ ಹಾರಿದರು. ತಮ್ಮ ಜೀವದ ಹಂಗು ತೊರೆದು ಮುಳುಗುತ್ತಿದ್ದವರ ರಕ್ಷಣೆಗೆ ಧಾವಿಸಿದ ತಾರಾ ಕುಮಾರಿ ಅವರ ಈ ನಡೆ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.